॥ ಓಂ ಕೇವಲ ॥

                                                                 
ಆತ್ಮೀಯ ಗುರುಭಕ್ತರೆ,
ವರಮಹಾಲಕ್ಷ್ಮಿ ಮತ್ತು ರಕ್ಷಾಬಂಧನ ಹಬ್ಬಗಳ ಶುಭಾಶಯಗಳು.

ಶ್ರೀಮಠ ದಲ್ಲಿ ವಿಶೇಷ ಪೂಜೆ- ಸೇವೆಗಳು ಮತ್ತು ಹಲವಾರು ಕಾರ್ಯಕ್ರಮಗಳು  ಕಳೆದ ಮಾಸದಲ್ಲಿ ಜರುಗಿದವು. 

ಹರಿಹರಪುರ  ಕ್ಷೇತ್ರದ  ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮಿಗಳು,  
ದಿನಾಂಕ 22-07-15 ರಂದು ಶ್ರೀಮಠಕ್ಕೆ ಆಗಮಿಸಿದರು. ಸಂಧ್ಯಾಕಾಲದ ಪೂಜೆ ಮತ್ತು 

ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಮರುದಿನ ನಡೆದ ಶ್ರೀಗಳ ಆಶೀರ್ವಚನ ಕಾರ್ಯಕ್ರಮದಲ್ಲಿ ಶ್ರೀ ಗಾಯತ್ರಿ ಉಪಾಸನೆ ಮಹತ್ವ ಬಗ್ಗೆ ವಿವರಿಸಿ, ಗಾಯತ್ರಿ ಉಪಾಸನೆಯಿಂದ ಚಿತ್ತಶುದ್ಧಿ ಉಂಟಾಗುವುದು, ಚಿತ್ತಶುದ್ಧಿಯಿಂದ ಕರ್ಮಬಂಧನ ಕಳೆಯುವುದು ಎಂದು ಶ್ಲೋಕ, ಹಾಡುಗಳ ಮೂಲಕ ಉಪದೇಶಿಸಿದರು. ಹರಿಹರ ಮತ್ತು ಸುತ್ತಮುತ್ತ ಊರುಗಳಿಂದ ಬಂದ ಗುರು ಭಕ್ತರು, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀಗಳ ದರ್ಶನ ಪಡೆದು, ಕಾಣಿಕೆ ಸಲ್ಲಿಸಿ ಫಲ ಮಂತ್ರಾಕ್ಷತೆ ಸ್ವೀಕರಿಸಿದರು.

ದಿನಾಂಕ 31-07-15 ಶುಕ್ರವಾರ, ಗುರು ಪೂರ್ಣಿಮೆಯಂದು  ಶ್ರೀಮಠದಲ್ಲಿ ಸಾಮೂಹಿಕ ಭಜನ ಕಾರ್ಯಕ್ರಮವು ನಡೆಯಿತು. ಸಂಜೆ 6 ಗಂಟೆಗೆ ಪ್ರಾರಂಭವಾಗಿ ರಾತ್ರಿ 8.30ರ ವರೆಗೆ  ಸ್ವಾಮಿ ಶ್ರೀ ಶಿವಾನಂದ ತೀರ್ಥರ ಮತ್ತು ಶ್ರೀ ಶಂಕರಲಿಂಗ ಭಗವಾನರ ಭಜನೆಗಳನ್ನು ಶ್ರದ್ಧಾಭಕ್ತಿಗಳಿಂದ ಹಾಡಿದರು. ಮಹಾಪೂಜೆಯ ನಂತರ ಮಹಾಪ್ರಸಾದ ಸಂತರ್ಪಣೆಯಾಯಿತು. ಹಲವಾರು ಪ್ರದೇಶಗಳಿಂದ ಬಂದ ಭಕ್ತರು, ಗುರುಪರಂಪರೆ ಬಗ್ಗೆ ಭಕ್ತಿಭಾವ ಹೊಂದಿದ್ದು ಶ್ರೀಮಠದ ಆಧ್ಯಾತ್ಮಿಕ ಶಕ್ತಿಯ ಪ್ರತೀಕವಾಗಿದೆ.

ದಿನಾಂಕ 13-08-15, ಗುರುವಾರದಂದು, ಪ.ಪೂ. ಸ್ವಾಮಿ ಶ್ರೀ ಶಿವಾನಂದ ತೀರ್ಥರ ಜಯಂತಿಯು ವಿಜ್ರಂಭಣೆಯಿಂದ ಜರುಗಿತು. ತೊಟ್ಟಿಲೋತ್ಸವ, ಪ್ರಸಾದ ವಿತರಣೆ ಮುಂತಾದ ಕಾರ್ಯಕ್ರಮಗಳಿಗೆ ಗುರುಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದರು.

ದಿನಾಂಕ 23-08-15 ರಂದು ಶ್ರೀ ನಿರಾಕಾರತೀರ್ಥರ ಮತ್ತು ದಿನಾಂಕ 25-08-15 ರಂದು ಶ್ರೀ ಪದ್ಮನಾಭತೀರ್ಥರ ಆರಾಧನೆ ಕಾರ್ಯಕ್ರಮಗಳು ನಡೆದವು.
ಆಗಸ್ಟ್ 28 ಮತ್ತು 29 ರಂದು ಬ್ರಾಹ್ಮಣ ಸೇವಾ ಸಂಘದ ವತಿಯಿಂದ  ಶ್ರೀಮಠದಲ್ಲಿ ಋಗ್ವೇದಿಯ ಮತ್ತು ಯಜುರ್ವೇದಿಯ ಉಪಾಕರ್ಮಏರ್ಪಡಿಸಲಾಗಿತ್ತು.


ಶ್ರೀಮಠದಲ್ಲಿ ಪ್ರತಿ ಗುರುವಾರದಂದು ಭಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ. ಕಾರಣ ಎಲ್ಲ ಗುರುಭಕ್ತರು ಭಾಗವಹಿಸಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಪ್ರಾರ್ಥನೆ.
 

ಶುಭ ಹಾರೈಕೆಗಳೊಂದಿಗೆ,

ಕಾರ್ಯದರ್ಶಿಗಳು,
ಸ್ವಾಮಿ ಶ್ರೀ ಶಿವಾನಂದ ತೀರ್ಥ ಟ್ರಸ್ಟ್,
ಓಂಕಾರಮಠ, ಕೋಟೆ, ಹರಿಹರ-೫೭೭೬೦೧

secretary@omkarmath.org